ದೀಪ ಬೆಳಗಿಸಿ ಸೈನಿಕರಿಗೆ ಗೌರವ ಸಲ್ಲಿಸಿ ಎಂದ ಪ್ರಧಾನಿ ಮೋದಿ
ನವದೆಹಲಿ, ನವೆಂಬರ್.13: ದೀಪಾವಳಿ ಸಂಭ್ರಮವನ್ನು ರಾಷ್ಟ್ರ ಮತ್ತು ಯೋಧರಿಗೆ
ಗೌರವ ಸಲ್ಲಿಸುವ ಮೂಲಕ ಆಚರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದ
ಸೈನಿಕರ ಧೈರ್ಯ, ಸಾಹಸ, ತ್ಯಾಗ, ಬಲಿದಾನಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಪದಗಳು ಸಾಕಾಗುವುದಿಲ್ಲ
ಎಂದು ಅವರು ಹೇಳಿದ್ದಾರೆ. ಈ ದೀಪಾವಳಿ ಹಬ್ಬದ ದಿನ ನಮ್ಮ ರಾಷ್ಟ್ರವನ್ನು ನಿರ್ಭಯವಾಗಿ ರಕ್ಷಿಸುವ
ಸೈನಿಕರನ್ನು ಗೌರವಿಸುವುದಕ್ಕಾಗಿ ದೀಪವನ್ನು ಬೆಳಗಿಸೋಣ. ನಮ್ಮ ಸೈನಿಕರ ಧೈರ್ಯಕ್ಕೆ ಕೃತಜ್ಞತೆ
ಸಲ್ಲಿಸಲುವುದಕ್ಕೆ ಪದಗಳನ್ನಷ್ಟೇ ಬಳಸಿದರೆ ನ್ಯಾಯ ಸಿಗುವುದಿಲ್ಲ. ಗಡಿಯಲ್ಲಿ ನಿಂತು ದೇಶ
ರಕ್ಷಿಸುತ್ತಿರುವ ಯೋಧರ ಕುಟುಂಬವನ್ನು ಕೂಡಾ ಗೌರವಿಸಬೇಕಿದೆ ಎಂದು ಮೋದಿ ತಿಳಿಸಿದ್ದಾರೆ.
ಜಮ್ಮು ಮತ್ತು
ಕಾಶ್ಮೀರದ ಗುರೆಜ್ ಸೆಕ್ಟರ್ ಹಾಗೂ ಉರಿ ಸೆಕ್ಟರ್ ನಲ್ಲಿ ಶುಕ್ರವಾರ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯಲ್ಲಿ
ಪಾಕಿಸ್ತಾನ ಸೇನೆಯು ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾದ
ಬೆನ್ನಲ್ಲೇ ಪ್ರಧಾನಿ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಮೂವರು ಭಾರತೀಯ
ಯೋಧರು ಹುತಾತ್ಮ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ
ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಗುರೇಜ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಒಬ್ಬ
ಭಾರತೀಯ ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಶುಕ್ರವಾರ ಜಮ್ಮು ಕಾಶ್ಮೀರದ ಗಡಿಯುದ್ದಕ್ಕೂ ಹಲವು
ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ
ನಡೆಸಿತು. ದವರ್, ಕೆರಾನ್, ಉರಿ ಮತ್ತು ನೌಗಮ್ ಸೆಕ್ಟರ್ ನಲ್ಲಿ ಪಾಕಿಸ್ತಾನ
ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು.
ಭಾರತದ ಪ್ರತಿದಾಳಿಗೆ
8 ಪಾಕ್ ಯೋಧರು ಸಾವು: ಜಮ್ಮು
ಕಾಶ್ಮೀರದ ಗಡಿಯಲ್ಲಿ ವಾಸ್ತವ ಗಡಿ ರೇಖೆ ಉಲ್ಲಂಘಿಸಿದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು
ನಡೆಸಿರುವ ಪ್ರತಿದಾಳಿಯಲ್ಲಿ 8 ಮಂದಿ ಪಾಕಿಸ್ತಾನ
ಯೋಧರು ಹತರಾಗಿದ್ದಾರೆ. ನಾಲ್ವರು ಪಾಕಿಸ್ತಾನ ಸೇನಾ ಯೋಧರು ಮತ್ತು ಮೂವರು ಪಾಕಿಸ್ತಾನ ವಿಶೇಷ
ಸೇವಾ ಪಡೆ ಯೋಧರು ಸೇರಿದ್ದಾರೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆ
ನಡೆಸಿರುವ ಪ್ರತಿದಾಳಿಯಲ್ಲಿ ಪಾಕಿಸ್ತಾನದ 10 ರಿಂದ 12 ಮಂದಿ ಯೋಧರು
ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆಗೆ ಸೇರಿದ ಸೇನಾ ಬಂಕರ್, ಪ್ಯೂಯಿಲ್ ಡಂಪ್ ಮತ್ತು ಲಾಂಚ್ ಪ್ಯಾಡ್
ನಾಶಪಡಿಸಲಾಗಿದೆ ಎಂದು ತಿಳಿದು ಬಂದಿದೆ.



ಕಾಮೆಂಟ್ಗಳಿಲ್ಲ